ರಾಜ್ಯದಲ್ಲಿ ಕಾಲೇಜು ಆರಂಭಿಸುವ ವಿಚಾರವಾಗಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹಾಗೂ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ಆರಂಭಕ್ಕೆ ಮಾಡಿಕೊಂಡ ಸಿದ್ದತೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಕೊವೀಡ್ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆ ಮಾಡಿಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.ಕಳೆದ ಏಳೆಂಟು ತಿಂಗಳಿಂದ ಕ್ಲೋಸ್ ಆಗಿದ್ದ ಕಾಲೇಜುಗಳನ್ನು ನವೆಂಬರ್ 17ರಿಂದ ಮರು ಆರಂಭಿಸಲು ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ.
ಕಾಲೇಜುಗಳ ಆರಂಭಕ್ಕೆ ಯಾವ ರೀತಿ ಸಿದ್ದತೆ ಹಾಗೂ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ಪಡೆದರು. ಪ್ರಾತ್ಯಕ್ಷಿಕೆ ಮೂಲಕ ಸಚಿವರು ಹಾಗೂ ಅಧಿಕಾರಿಗಳು ಸಿಎಂಗೆ ಸಿದ್ಧತೆಗಳನ್ನು ವಿವರಿಸಿದರು. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜುಗಳು ನವೆಂಬರ್ 17ರಿಂದ ಪುನರಾರಂಭವಾಗಲಿವೆ.
Published by: Mallappa pattanashetti

