ರಾಜ್ಯಗಳಿಗೆ 28ರೂ. ರಂತೆ ಈರುಳ್ಳಿ ಮಾರಲು ಕೇಂದ್ರ ಸರ್ಕಾರ ರೆಡಿ| ನಾಸಿಕ್ನಲ್ಲಿ ದಾಸ್ತಾನಿದೆ, ಖರೀದಿಸಿ ದರ ಇಳಿಸಿ.
✍️: Mallappa Pattanashettiಅತಿವೃಷ್ಟಿಕಾರಣ ಬೆಳೆ ಹಾಳಾಗಿ ಈರುಳ್ಳಿ ದರ ಕರ್ನಾಟಕ ಸೇರಿದಂತೆ ಅನೇಕ ಕಡೆ 100 ರು. ದಾಟುತ್ತಿದ್ದಂತೆಯೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ತನ್ನಲ್ಲಿನ ದಾಸ್ತಾನು ಪಡೆದುಕೊಂಡು ರಾಜ್ಯಗಳು ದರ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದೆ.
ಈರುಳ್ಳಿ ದರ ಬೆಂಗಳೂರಿನಲ್ಲಿ 120 ರು., ಮುಂಬೈನಲ್ಲಿ 86 ರು., ಚೆನ್ನೈನಲ್ಲಿ 83 ರು., ಕೋಲ್ಕತಾದಲ್ಲಿ 70 ರು., ದಿಲ್ಲಿಯಲ್ಲಿ 55 ರು.ಗೆ ಏರಿದೆ. ಈ ಬಗ್ಗೆ ವ್ಯಾಪಕ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮಾಡಿದೆ. ತಾವಾಗೇ ತೆಗೆದುಕೊಂಡು ಹೋಗಲು ಮುಂದೆ ಬರುವ ರಾಜ್ಯಗಳಿಗೆ ಕೆಜಿಗೆ 26ರಿಂದ 28 ರು. ಹಾಗೂ ಡೆಲಿವರಿಗೆ ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ 30 ರು.ನಂತೆ ಮಾರಾಟ ಮಾಡಲಿದೆ.
ಈ ನಡುವೆ, ‘ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಹರ್ಯಾಣ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಒಟ್ಟಾರೆ 8000 ಟನ್ ಈರುಳ್ಳಿ ದಾಸ್ತಾನಿಗೆ ಬೇಡಿಕೆ ಸಲ್ಲಿಸಿವೆ. ಇತರ ರಾಜ್ಯಗಳ ಬೇಡಿಕೆಗಾಗಿ ಎದುರು ನೋಡುತ್ತಿದ್ದೇವೆ’ ಎಂದು ಸಚಿವಾಲಯ ಹೇಳಿದೆ.
