🌹ಇಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ🌹
ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತೆಯ ದಿನ (ಅಕ್ಟೋಬರ್ 31) ದಿನವನ್ನಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಏಕತೆಯ ದಿನವನ್ನು ಭಾರತ ಸರ್ಕಾರ 2014 ರಲ್ಲಿ ಪರಿಚಯಿಸಿತು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 560 ಸಂಸ್ಥಾನಗಳಿಂದ ಭಾರತವನ್ನು ಏಕೀಕರಣಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಮಂತ್ರಿ ಮತ್ತು ಸ್ವತಂತ್ರ ಭಾರತದ ಗೃಹಸಚಿವರೂ ಆಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತವನ್ನು ಒಂದುಗೂಡಿಸಲು ಮಾಡಿದ ಪ್ರಯತ್ನಗಳನ್ನು ಅಂಗೀಕರಿಸುವ ದಿನವನ್ನು ರಾಷ್ಟ್ರೀಯ ಏಕತೆ ದಿನ ಎಂದು ಆಚರಿಸಲಾಗುತ್ತಿದೆ.
ಭಾರತ ವೈವಿಧ್ಯತೆ ಹೊಂದಿರುವ ದೇಶ. ಇಲ್ಲಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾಷೆಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಇಂತಹ ವಿವಿಧತೆಯಲ್ಲಿ ಏಕತೆ - ಒಗ್ಗಟ್ಟು ಕಾಪಾಡಿಕೊಂಡು ಹೋಗುವುದು ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. ಹೀಗೆ ಸರ್ದಾರ್ ಪಟೇಲರು ಏಕತೆಗೆ ಯಾವ ರೀತಿ ಕೊಡುಗೆ ನೀಡಿದ್ದರು ಎಂಬ ಬಗ್ಗೆ ಇಂದಿನ ಜನಾಂಗದವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಟೇಲರ ಜನ್ಮದಿನವನ್ನು ಏಕತೆಯ ದಿನವನ್ನಾಗಿ ಆಚರಿಸುತ್ತಿದೆ. 2018 ರಲ್ಲಿ ಭಾರತದ ಪ್ರಧಾನಿ ನರೇಂದ್ರಮೋದಿ ಯವರು ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ( 597 ಅಡಿ ) ಯನ್ನು ಉದ್ಘಾಟಿಸಿದ್ದರು.
ರಾಷ್ಟ್ರೀಯ ಏಕತಾ ದಿವಸ ಏಕೆ ಗೊತ್ತೇ ?
ಗುಜರಾತಿನ ಕರಮ್ ಸಂದ್ ನಲ್ಲಿ 1875 ರ ಅಕ್ಟೋಬರ್ 31 ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದರೂ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಸ್ವಾತಂತ್ರ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇವರು ಸುಮಾರು 500 ಕ್ಕೂ ಅಧಿಕ ರಾಜಮನೆತನಗಳ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ “ಉಕ್ಕಿನ ಮನುಷ್ಯ” ಎಂದೇ ಪ್ರಸಿದ್ಧರಾದಂತಹ ಓರ್ವ ಧೀಮಂತ ವ್ಯಕ್ತಿ!!
ಇಂತಹ ಪಟೇಲರ ಕುರಿತು ಇತಿಹಾಸದ ಪುಸ್ತಕಗಳಲ್ಲಿ ಹೆಚ್ಚಿನ ವಿವರವನ್ನ ನಾವು ನೋಡಬಹುದು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳು ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವರಾಗಿದ್ದ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮವನ್ನು ನಾವು ಸ್ಮರಿಸಲೇಬೇಕು. ದೇಶದ ಏಕತೆಗಾಗಿ ಸರ್ದಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶವನ್ನು ಸಾರುವುದು ಈ ದಿನಾಚರಣೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು “ರಾಷ್ಟ್ರೀಯ ಏಕತಾ ದಿನ” ವನ್ನಾಗಿ ಆಚರಿಸಲು ನಮ್ಮ ದೇಶ ನಿರ್ಧರಿಸಿದೆ.
ಇನ್ನು ಈ “ರಾಷ್ಟ್ರೀಯ ಏಕತಾ ದಿನ” ದ ನಿಮಿತ್ತ ಎಲ್ಲ ಶಾಲಾ ಮಕ್ಕಳು, ನಾನು ಸತ್ಯ ನಿಷ್ಠೆಯಿಂದ ಪ್ರಮಾಣೀಕರಿಸುವುದೇನೆಂದರೆ, *"ನಾನು ದೇಶದ ಏಕತೆ, ಸಮಗ್ರತೆ ಮತ್ತು ಸುರಕ್ಷತೆ ಕಾಪಾಡಲು ಹಾಗೂ ಈ ಸಂದೇಶವನ್ನು ನನ್ನ ದೇಶವಾಸಿಗಳಲ್ಲಿ ಹರಡಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತೇನೆ. ನಾನು ಈ ಪ್ರತಿಜ್ಞೆಯನ್ನು ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಏಕತೆಗಾಗಿ ಹೊಂದಿದ್ದ ದೂರದಷ್ಟಿ ಹಾಗೂ ಕೈಗೊಂಡ ದಿಟ್ಟ ಕ್ರಮಗಳನ್ನು ಸ್ಮರಿಸುತ್ತ ಸ್ವೀಕರಿಸುತ್ತೇನೆ. ಇದರ ಜತೆಗೆ ನಾನೂ ದೇಶದ ಆಂತರಿಕ ಭದ್ರತೆ ಕಾಪಾಡಲು ಮನಃಪೂರ್ವಕ ಹಾಗೂ ಸತ್ಯನಿಷ್ಠೆಯಿಂದ ಸಂಕಲ್ಪ ಮಾಡುತ್ತೇನೆ”* ಎಂದು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲಿದ್ದಾರೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ!!